ಇತಿಹಾಸ ಪ್ರಸಿದ್ಧವಾದ ಬೆಂಗಳೂರಿನ ನಗರ ದೇವತೆ ಶ್ರೀ ಅಣ್ಣಮ್ಮ ದೇವಿ ದೇವಾಲಯವು ಬೆಂಗಳೂರು ನಗರದ ಹೃದಯ ಭಾಗವಾದ ಗಾಂಧಿನಗರದಲ್ಲಿದ್ದು, ಮೆಜೆಸ್ಟಿಕ್ ನಿಂದ ಕೇವಲ 500 ಮೀಟರ್ ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವತೆ ಅಣ್ಣಮ್ಮನಾಗಿದ್ದು ಸಪ್ತ ಮಾತೃಕೆಯರ ಪ್ರತಿರೂಪದಲ್ಲಿ ಈ ದೇವಿಯನ್ನು ಪೂಜಿಸಲಾಗುತ್ತದೆ.ಈ ದೇವಿಯನ್ನು ನಗರದ ಅಧಿದೇವತೆ, ಬೆಂಗಳೂರಿನ ಕಾವಲು ದೇವತೆ, ಗ್ರಾಮದೇವತೆ ಹಾಗು ನವಶಕ್ತಿ ಅಣ್ಮಮ್ಮ, ಎಂದು ಕರೆಯುವುದುಂಟು. ವಿಶ್ವ ಪ್ರಸಿದ್ಧವಾದ ಈ ದೇವಾಲಯಕ್ಕೆ ನಾನಾ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ಈ ದೇವಾಲಯವು ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. == ಇತಿಹಾಸ == ಶ್ರೀ ಅಣ್ಣಮ್ಮ ದೇವಿ ದೇವಾಲಯವು ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ. ಅಣ್ಣಮ್ಮ ದೇವಿಯು ಹಲವು ವರ್ಷಗಳ ಹಿಂದೆ ಮುನಿಸ್ವಾಮಣ್ಣ ಹಾಗು ಅಣ್ಣೆಪ್ಪ ಎಂಬುವವರ ಜಮೀನಿನಲ್ಲಿ ಏಳು ಸಣ್ಣ ಕಲ್ಲುಗಳ ಮೂಲಕ ಸಪ್ತ ಮಾತೃಕೆಯರ ರೂಪದಲ್ಲಿ ಉದ್ಭವಿಸಿದಳು ಎಂಬ ಇತಿಹಾಸವಿದೆ. ಈ ಆಲಯವನ್ನು ತಮ್ಮ ಕುಟುಂಬದವರೇ ನಿರ್ಮಾಣ ಮಾಡಿದ್ದು, ದೇವಾಲಯದ ಆಡಳಿತವನ್ನು ಕುಟುಂಬದವರೇ ನಿರ್ವಹಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅಣ್ಣಮ್ಮ ದೇವಿಯ ಪ್ರಮುಖ ಭಕ್ತ ನಾಗಿದ್ದನು ಎಂದು ಹೇಳಲಾಗುತ್ತದೆ. = ದೇವಾಲಯದ ರಚನೆ = ದೇವಾಲಯವು ಆಯತಕಾರದ ಗರ್ಭಗೃಹ ಹೊಂದಿದ್ದು, ಗರ್ಭಗೃಹದ ನಡುವೆ ಉದ್ದದ ಪೀಠದ ಮೇಲೆ ಸಪ್ತಮಾತೃಕೆಯರ ಪ್ರತೀಕವಾಗಿ ಏಳು ಕಲ್ಲಿನ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಎರಡು ದೇವಿಯ ಶಿಲ್ಪಗಳಿದ್ದು ಚತುರ್ಬುಜೆಯಾದ ದೇವಿಯ ಕೈಗಳಲ್ಲಿ ಕ್ರಮವಾಗಿ ಖಡ್ಗ ತ್ರಿಶೂಲ, ಡಮರು ಮತ್ತು ಪಾನ ಪಾತ್ರಗಳಿವೆ. ಗರ್ಭಗೃಹದ ಮುಂದಿನ ನವರಂಗ, ಮುಖ ಮಂಟಪದ ಭಾಗಗಳು, ಅನಂತರದ ಸೇರ್ಪಡೆಗಳಾಗಿವೆ. ಜನಸಂದಣಿ ಇರುವ ರಸ್ತೆಯ ನಡುವೆ ಇರುವ ಈ ದೇವಾಲಯವು ಹಲವು ಭಾರಿ ಜೀರ್ಣೋದ್ಧಾರ ಗೊಂಡಿದೆ. ಆದ್ದರಿಂದ ದೇವಾಲಯದ ಮೂಲ ಸ್ವರೂಪದ ಬಗ್ಗೆ ತಿಳಿಯಲಾಗುವುದಿಲ್ಲ. ಈ ದೇವಾಲಯವು ಪ್ರಸ್ತುತ ಕಾಲಮಾನದ ವಾಸ್ತು ವಿನ್ಯಾಸವನ್ನು ಹೊಂದಿದ್ದು, ದೇವಾಲಯದ ಗರ್ಭಗೃಹದ ಹೊರಗೋಡೆಗಳ ಮೇಲೆ ಸಪ್ತ ಮಾತೃಕೆಯರ ಉಬ್ಬು ಶಿಲ್ಪಗಳನ್ನು ಕಾಣಬಹುದಾಗಿದೆ. ದೇವಾಲಯದ ಒಳಗೆ ಸುತ್ತಲೂ ದೇವಿಯ ಕಂಚಿನ ಉತ್ಸವ ಮೂರ್ತಿಗಳನ್ನು ಇರಿಸಲಾಗಿದೆ. = ಉತ್ಸವಗಳು = ಅಣ್ಣಮ್ಮ ದೇವಿ ಉತ್ಸವವನ್ನು ಸಾಮಾನ್ಯವಾಗಿ ಚೈತ್ರ ಮಾಸದಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ. ಪ್ರಮುಖವಾಗಿ ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ದಿನದಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾತ್ರಿ ಸಂದರ್ಭದಲ್ಲಿ ದೇವಿಯನ್ನು ಪಲ್ಲಕ್ಕಿ ಉತ್ಸವದ ಮೂಲಕ ಮೆರವಣಿಗೆ ಮಾಡುತ್ತಾರೆ, ಹಾಗು ನವರಾತ್ರಿ ಸಂದರ್ಭದಲ್ಲಿ ದೇವಿಗೆ 9 ದಿನಗಳ ಕಾಲ ವಿಶೇಷ ಅಲಂಕಾರಪೂಜೆಗಳನ್ನು ನೆರವೇರಿಸಲಾಗುತ್ತದೆ. ಬೆಂಗಳೂರಿನ ಕೆಲವು ಪುಮುಖ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಭಕ್ತರು ಪೂಜಾ ಮೆರವಣಿಗೆಗೆ ದೇವಿಯ ಉತ್ಸವ ಮೂರ್ತಿಗಳನ್ನು ಕೊಂಡೊಯ್ಯುವರು.ಯುಗಾಧಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ದೇವಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. = ದೇವಾಲಯದ ಮಹತ್ವ = ಈ ದೇವಾಲಯದ ಮಹತ್ವವೆಂದರೆ,ಬೆಂಗಳೂರಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.ಬೆಂಗಳೂರು ಕರಗವು ಪ್ರತಿವರ್ಷವೂ ಈ ದೇವಾಲಯಕ್ಕೆ ಭೇಟಿನೀಡಿ ಜನರನ್ನು ಆಶೀರ್ವದಿಸಿ ತೆರಳುತ್ತದೆ. ವಿಶೇಷವೆಂದರೆ ಈ ದೇವಾಲಯದಲ್ಲಿ ಬಿಸಿಲು ಮಾರಮ್ಮನನ್ನು ಸಹ ಪೂಜಿಸಿತ್ತಾರೆ.ಜನರು ತಮ್ಮ ಕಷ್ಟಕಾರ್ಪಣ್ಯಗಳನ್ನು ಈಡೇರಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. = ಉಲ್ಲೇಖಗಳು =